Wednesday, October 28, 2009

ಪರಿವರ್ತನೆಯ ಗಾಳಿ

ನಮ್ಮ ಊರಿಲ್ಲಿ  ಕೆಲವು ಸಮಯಂದ ಕೇಳಿ ಬತ್ತಾ  ಇತ್ತಿದ್ದ  ಸಮಸ್ಯೆ ಹೇಳಿರೆ ಕೃಷಿಕಾರ್ಮಿಕರ ಕೊರತೆ.   ಕೂಲಿ ಆಳುಗಳ ಮಕ್ಕೊ ವಿದ್ಯಾಭ್ಯಾಸ ಪಡಕ್ಕೊಂಡು ಉದ್ಯೋಗ ವಿಕಲ್ಪಂಗಳ  ಹುಡುಕ್ಕಿಗೊಂಡು ಹೋಪಲೆ ಸುರು ಆದ್ದದು  ಹೆಚ್ಚುಕಮ್ಮಿ ಒಂದು ತಲೆಮಾರು ಹಿಂದಾಣ ಪ್ರಕ್ರಿಯೆ.  ಆನು ಶಾಲೆಗೆ ಹೋಪ ಕಾಲಕ್ಕೆ ಬೀಡಿ ಕಟ್ಟುವ ಕೆಲಸ ವ್ಯಾಪಕವಾದ ಗುಡಿ ಕೈಗಾರಿಕೆ ಆದ್ದದು (ಹೆಣ್ಣು)  ಕೃಷಿ ಕಾರ್ಮಿಕರ ಕೊರತೆ ಉಂಟಪ್ಪಲೆ  ದೊಡ್ಡ ಕಾರಣ ಆಗಿತ್ತು.  ಆ ಸಮಯಲ್ಲಿ  ಅಲ್ಪ ಸ್ವಲ್ಪ ಕಲಿವಿಕೆ ಆದ ಗೆಂಡಾಳುಗೊಕ್ಕೆ ಮೀಸಲಾತಿ ಲೆಕ್ಕಲ್ಲಿ ಸರಕಾರೀ ಬ್ಯಾಂಕುಗಳಲ್ಲಿ ಗುಮಾಸ್ತ,  ಪೇದೆಯೇ ಮೊದಲಾದ   ಕೆಲಸ ಸಿಕ್ಕಿಗೊಂಡಿತ್ತು.   ಅಂಬಗ ಕೆಲವರ ಮನೆಗಳಲ್ಲಿ ಮಾತ್ರ ಶಾಲೆಗೆ ಕಳುಸುವ ಅಭ್ಯಾಸ ಇತ್ತದಾದರೆ, ಈಗ ಪ್ರತಿಯೊಂದು ಮನೆಯ ಮಕ್ಕಳೂ ಶಾಲೆಗೆ ಹೋವುತ್ತವು.  ಈ ಬೆಳವಣಿಗೆ ಸರಕಾರದ  ಸಂಪೂರ್ಣ ಸಾಕ್ಷರತಾ ಅಭಿಯಾನವ ಯಶಸ್ವಿ ಮಾಡಿ, ಇನ್ನೊಂದು ಹೊಡೆಂದ ಕೃಷಿ ಕಾರ್ಮಿಕರ ಸಮಸ್ಯೆ ಇನ್ನೂ ಉಲ್ಬಣಿಸುವ ಹಾಂಗೆ ಮಾಡಿದ್ದು.   

ಕಲ್ತ ಮೇಲೆ ಅವರವರ ಯೋಗ್ಯತೆಯ ಮೇಲೆ ಯಾರು ಎಂತ ಬೇಕಾರೂ ಅಪ್ಪಲಕ್ಕನ್ನೆ ? ಅಲ್ಲಿಗೆ, ಜಾತಿ-ವೃತ್ತಿಗಳ ಮಧ್ಯೆ ಇತ್ತ ತಲೆತಲಾಂತರದ ಸಂಬಂಧದ ಕೊಂಡಿ ಹೆಚ್ಚು ಕಮ್ಮಿ ಮುಗುದ ಹಾಂಗೇ ಹೇಳಿ ಕಾಣ್ತು.  ಇನ್ನಾಣ ಕಾಲಲ್ಲಿ   ಭಂಡಾರಿಯ ಮಗ ವೈದ್ಯನೋ, ಕೂಲಿಯವನ ಮಗ ಶಿಕ್ಷಕನೋ ಅಪ್ಪಲಕ್ಕು.  ಹಾಂಗೇ, ಬ್ರಾಹ್ಮಣನ ಮಗ ವಾಹನ ಚಾಲಕನೂ ಅಪ್ಪಲಕ್ಕು.  ಕೆಲಸ ಹೇಳುದು ಜನ್ಮಂದ ಅಥವಾ ಜಾತಿಂದ ನಿರ್ಧಾರ ಅಪ್ಪದರ ಬದಲು ಅವರವರ ಯೋಗ್ಯತೆಯ ಮೇಲೆ ನಿರ್ಧಾರ ಆಯೆಕಾದ್ದದು ನ್ಯಾಯ ಹೇಳಿ ಒಪ್ಪಿಗೊಂಡರೆ,  ವರ್ಣಾಶ್ರಮ ವ್ಯವಸ್ಥೆಯ ಸರಿಯಾದ ವ್ಯಾಖ್ಯಾನ ಮಾಡ್ಳೆ ಎಡಿಗಕ್ಕು.  ಯಾವುದೇ ಸಮಾಜಲ್ಲಿ  ಬ್ರಾಹ್ಮಣ (ಜ್ಞಾನಿಗೊ/ಗುರುಗೊ/ಅರ್ಚಕರು), ಕ್ಷತ್ರಿಯ (ರಾಜರು/ಯೋಧರು),  ವೈಶ್ಯ (ವ್ಯಾಪಾರಿವರ್ಗ/ಕಾರ್ಖಾನೆ ಮಾಲಿಕಂಗೊ),   ಶೂದ್ರ (ಕೂಲಿಯೇ ಮೊದಲಾದ ಸಾಮಾನ್ಯ ಕೆಲಸದವು) -   ಹೀಂಗೆ ನಾಲ್ಕು ಪಂಗಡಂಗೊ ಇರೆಕಾದ್ದದು ಅತಿ ಅವಶ್ಯ.   ಮುಂದುವರಿದ ಸಮಾಜಂಗಳಲ್ಲಿಯೂ ಈ ಪಂಗಡಂಗೊ ಇದ್ದು.  ಆದರೆ, ಅವು ಶೂದ್ರ ವರ್ಗದವಕ್ಕೆ ಅಡ್ಡ ಹಂತಿ ಹಾಕದ್ದೆ ವೃತ್ತಿ ಗೌರವವ ಕಾಪಾಡಿಗೊಂಡು ಬೈಂದವು.   ಅದೇ,  ಎಷ್ಟೆಲ್ಲಾ ಒಳ್ಳೆಯ ಆಂಶಂಗೊ ಇಪ್ಪ ನಮ್ಮ ಪುರಾತನ ಘನ ಸಂಸ್ಕೃತಿಲಿ ಕೆಲವು ಸ್ವಾರ್ಥ ಮತ್ತು  ಸಣ್ಣತನದ ನಡವಳಿಕೆಗೊ  ಸೇರಿಗೊಂಡು ಜನಂಗೊ ಅದನ್ನೇ ತಮ್ಮ ಅನುಕೂಲಕ್ಕೆ ಉಪಯೋಗಿಸಿಗೊಂಬ ಹಾಂಗೆ ಆತು.  ಅಸ್ಪೃಶ್ಯತೆ ಇಂತಹ ಸಣ್ಣತನಕ್ಕೆ ಒಂದು ಉದಾಹರಣೆ.   ಮುಂದಿನ ಸುಶಿಕ್ಷಿತ ಸಮಾಜಲ್ಲಿ ಇಂತಹ ನಡವಳಿಕೆಗೊಕ್ಕೆ ಅವಕಾಶ ಇಲ್ಲದ್ದ ಕಾರಣ ಅದೆಲ್ಲಾ ತನ್ನಷ್ಟಕೇ  ನಿಂದು ಹೋಕು.  ಎಷ್ಟೋ ತಲೆಮಾರಿಂದ ಕೆಳಾಣ ವರ್ಗಲ್ಲಿದ್ದವು ಕಲ್ತು ತಕ್ಷಣ ಮುಂದೆ ಬಂದಪ್ಪಗ  ಅಲ್ಪ ಕಾಲಾವಧಿಲಿ ಗುಣಮಟ್ಟದ ಸಮಸ್ಯೆ ಉಂಟಪ್ಪ ಸಾಧ್ಯತೆ  ಇದ್ದರೂ, ಒಟ್ಟಾರೆ  ಇದೊಂದು ನಮುನೆ ಸಕಾರಾತ್ಮಕವಾದ ಬೆಳವಣಿಗೆ  ಹೇಳಿ ಎನ್ನ ಖಾಸಗಿ ಅಭಿಪ್ರಾಯ.  ಹಾಂಗಾರೆ, ಕೃಷಿಕರ ಸಮಸ್ಯೆಗೆ ಪರಿಹಾರ ಎಂತ ಹೇಳುವ ಪ್ರಶ್ನೆಗೆ ನಿಧಾನಕ್ಕೆ ಸಮಾಧಾನ ಸಿಕ್ಕೆಕ್ಕಷ್ಟೆ ಹೇಳಿ ಕಾಣ್ತು.  ಕೃಷಿಯನ್ನೇ ಇಷ್ಟ ಪಟ್ಟು ಮಾಡುವವು ತಾವೇ ಸ್ವತಃ ಕೆಲಸ ಮಾಡುವ ಸಾಮರ್ಥ್ಯ ಬೆಳೆಶಿಗೊಂಗು. ಅಥವಾ, ಅಡಕ್ಕೆಯಂತಹ ಕಷ್ಟದ ಕೃಷಿ ಬಿಟ್ಟು ಸುಲಭದ ಪರ್ಯಾಯಂಗಳ ಹುಡುಕ್ಕುಗು.  ಇಲ್ಲವೇ, ಸ್ವಂತ ಪ್ರೇರಣೆಂದ ಪರಸ್ಪರ ಸಹಕಾರಕ್ಕಾಗಿ ಕೃಷಿಕರ ಸ್ವ-ಸಹಾಯ ಗುಂಪುಗೊ ಹುಟ್ಟಿಗೊಂಗು.  ಅಂತೂ ಎಲ್ಲವೂ ಸುಖಾಂತ ಅಕ್ಕು ಹೇಳಿ ಗ್ರೇಶಿಗೊಂಬೊ.

ಈಗ ಊರಿಲ್ಲಿ ಆಳುಗಳ ಸಮಸ್ಯೆ ಬಗ್ಗೆ  ಆರೂ ಅಷ್ಟು ಮಾತಾಡ್ತವಿಲ್ಲೆ.  ಸದ್ಯದ ಬಿಸಿ ಸುದ್ದಿ ಹೇಳಿರೆ,  ಜವ್ವನಿಗರಿಂಗೆ ಮದುವೆಗೆ "ಯೋಗ್ಯ"  ಕೂಸುಗೊ ಸಿಕ್ಕದ್ದೆ ಇಪ್ಪದು.  ಅದರಲ್ಲೂ ವಿಶೇಷವಾಗಿ,  ಕೃಷಿಕರ ಮಕ್ಕೊಗೆ.    ಸದ್ಯಕ್ಕೆ ಸಮಾಜಲ್ಲಿ ಮಾಣಿ-ಕೂಸುಗಳ ಸಂಖ್ಯೆಲಿಪ್ಪ ಅಸಮತೋಲನವೇ  ಮೂಲ ಕಾರಣಂಗಳಲ್ಲಿ ಒಂದು ಆಗಿಪ್ಪಲೂ ಸಾಕು.   ಇದರ ದೈವಲೀಲೆ ಹೇಳಿ ಅನುಭವಿಸೆಕ್ಕಷ್ಟೆ.   ಮತ್ತೆ,  ಈಗ ಹೆಚ್ಚು ಹೆಚ್ಚು ಕೂಸುಗೊ ಕಲಿವಿಕೆ ಆಗಿ, ವೃತ್ತಿಜೀವನದ ಸಾಧನೆಗೆ  ಆದ್ಯತೆ ಕೊಟ್ಟುಗೊಂಡು ಆರ್ಥಿಕ ಸ್ವಾವಲಂಬನೆ ಪಡಕ್ಕೊಂಡಿಪ್ಪದುದೇ ಇನ್ನೊಂದು ಪ್ರಬಲ ಕಾರಣ ಹೇಳಿಯೂ ವಿಮರ್ಶೆ ಮಾಡ್ಳಕ್ಕು.   ೧೦ ವರ್ಷದ ಸಣ್ಣ ಪ್ರಾಯಲ್ಲಿ  ಮದುವೆ ಆಗಿ ಗೆಂಡನ ಮನೆಯವರ ಸೇವೆ ಮಾಡ್ಳೆ ಸುರು ಮಾಡಿ, ಹತ್ತತ್ತು ಮಕ್ಕಳ ಹೆತ್ತು ದೊಡ್ದ ಮಾಡಿದ  ಹಿಂದಾಣ ತಲೆಮಾರಿನ  ಎಷ್ಟೋ ಜನರ ಕಥೆ ನವಗೆ ಕೇಳಿ ಅಥವಾ ನೋಡಿ ಗೊಂತಿಕ್ಕು.  ಅದೇ  ಈಗ, ೩೦ ವರ್ಷ ಆದರೂ ಸ್ವ-ಇಚ್ಛೆಂದ ಮದುವೆ ಆಗದ್ದೆ ಇಪ್ಪ ಕೂಸುಗೊ ಎಷ್ಟುದೇ ಇದ್ದವು.   ಆದರೆ, ಕೃಷಿಮಾಡುವ ಮಾಣ್ಯಂಗೊಕ್ಕೆ ಮನೆಲಿ ಅಬ್ಬೆಗೆ ಒಬ್ಬಂಗೇ ಕೆಲಸ ಮಾಡಿಗೊಂಬಲೆ ಪೂರೈಸುತ್ತಿಲ್ಲೆ ಹೇಳಿ  ಮದುವೆ ಅಪ್ಪಲೆ ಅಂಬ್ರೆಪ್ಪು.  ಹೀಂಗೆ ದೃಷ್ಟಿಕೋಣಂಗಳ ಮಧ್ಯೆ ಇಪ್ಪ ಅಂತರಂದಾಗಿ   ಇಂದಿಂಗೆ  ಮದ್ಮಾಳುಗಳ  ತತ್ವಾರ ಕಂಡು ಬತ್ತಾ ಇದ್ದು.   ಮೊದ್ಳಾಣ ಅಜ್ಜಂದ್ರು ಎಲ್ಲಾ ಎರಡೆರಡು ಮದುವೆ ಆಗಿ ಹೆಂಡತ್ತಿಯಕ್ಕಳ ಗಾಣದ ಎತ್ತು (ಎಮ್ಮೆ) ಗಳ ಹಾಂಗೆ ನಡೆಶಿಗೊಂಡ ಪಾಪದ ಫಲವ ಪುಳ್ಯಕ್ಕೊ ಅನುಭವಿಸುತ್ತಾ ಇಪ್ಪದೋ ಏನೋ ?   ಅಂತೂ, ಮಾಣ್ಯಂಗಳ ದೊಡ್ಡಸ್ತಿಕೆಯ "ಸುವರ್ಣ ಯುಗ"  ಮುಗುತ್ತು ಹೇಳ್ಳಕ್ಕು !  ಅದರೊಟ್ಟಿಂಗೇ, ಕೂಸಿನ ಅಬ್ಬೆಪ್ಪಂದ್ರಿಂಗೆ ನಿಜವಾಗಿ ಸಲ್ಲೆಕ್ಕಾದ ಮರ್ಯಾದೆ ಸಿಕ್ಕುವ ಕಾಲವೂ  ಕೂಡಿ ಬಂತು.

ಇದರೊಟ್ಟಿಂಗೆ ಜಾತಿಯ ಬೇಲಿಯೂ ಶಿಥಿಲ ಆಗಿ ಹವ್ಯಕ-ಹವ್ಯಕೇತರರ ಮಧ್ಯೆ ಸಂಬಂಧಂಗೊ ಹೆಚ್ಚು ಸಂಖ್ಯೆಲಿ  ಕಾಂಬಲೆ, ಕೇಳ್ಳೆ  ಸಿಕ್ಕುತ್ತಾ ಇದ್ದು.   ಇಷ್ಟರವರೆಗೆ ನಮ್ಮ ಜೆಂಬ್ರಂಗಳಲ್ಲಿ   ಬರೀ ಕುಂಬ್ಳೆ ಸೀಮೆಯ ಮೇಲಾರ,  ಸುಳ್ಯ ಸೀಮೆಯ ಸೀವು ಇತ್ಯಾದಿಗಳ ವೈವಿಧ್ಯ ಆದರೆ,  ಇನ್ನು ಮುಂದೆ ಕಲ್ಕತ್ತಾದ ರಸಗುಲ್ಲಾ, ಚೆನ್ನೈಯ ಪೊಂಗಲ್, ಮಹಾರಾಷ್ಟ್ರದ ಶ್ರೀಖಂಡ್, ಪಂಜಾಬಿನ  ಜಿಲೇಬಿ ಇತ್ಯಾದಿಗಳನ್ನೂ ಚಪ್ಪರಿಸುವ  ಅವಕಾಶ  ಹೆಚ್ಚು ಹೆಚ್ಚು ಸಿಕ್ಕುಲೂ ಸಾಕು.   ಕೇವಲ  ಮೃಷ್ಟಾನ್ನವ ಅಪೇಕ್ಷೆ ಮಾಡುವ ಇತರರಿಂಗೆ ಇದು ಸುವಾರ್ತೆ  ಆದರೂ, ಆಯಾ ಮಾಣಿ-ಕೂಸುಗಳ ಅಬ್ಬೆಪ್ಪಂದ್ರಿಂಗೆ  ಖಂಡಿತ ಸುಲಭಲ್ಲಿ ಜೀರ್ಣ ಅಪ್ಪ ಸಂಗತಿ ಅಲ್ಲ.  ಸಂಪ್ರದಾಯವನ್ನೇ  ನಂಬಿಗೊಂಡು ಜೀವನ ಮಾಡಿದವಕ್ಕೆ ತಕ್ಷಣ ಯಾರೋ ಇಬ್ರಾಯಿ, ಪಿಂಟೋ, ಸರ್ದಾರ್ಜಿ, ಮೆಹ್ತಾ, ಪಟ್ನಾಯಕ್ ಅಥವಾ ಬ್ಯಾನರ್ಜಿಯ  ಅಳಿಯ ಹೇಳಿ ಸ್ವೀಕಾರ  ಮಾಡ್ಳೆ ಹೇಂಗೆ ಸಾಧ್ಯ ?  ಆದರೆ, ಪರಿವರ್ತನೆಯ ಗಾಳಿ ಪ್ರಬಲವಾಗಿಯೂ, ವ್ಯಾಪಕವಾಗಿಯೂ ಇಪ್ಪಗ  ಹವ್ಯಕ ಸಮಾಜಕ್ಕೆ ಮಾತ್ರ ತಟ್ಟದ್ದೆ ಇಪ್ಪದಾದರೂ ಹೇಂಗೆ ?

ಪರಿವರ್ತನಾಶೀಲವಾಗಿಪ್ಪದು ಸಮಾಜದ ಸಹಜ ಪ್ರವೃತ್ತಿ ಹೇಳಿ ಆದರೆ, ಅದರ ಒಪ್ಪಿಗೊಂಬದೇ ಸುಖವೋ ಏನೋ ?

- ಬಾಪಿ / ಬುಧವಾರ, ೨೮ ಅಕ್ಟೋಬರ ೨೦೦೯

No comments: